ದೇವರು ಯಾರು? ನಾನು ಯಾರು? ನಾನು ಈ ಜಗತ್ತಿಗೆ ಬಂದ ಕಾರಣವೇನು? ನನ್ನ ಜೀವನದ ಗುರಿ ಏನು? ದೇವರೊಡನೆ ನನಗಿರುವ ಸಂಬಂಧವೇನು?
ವಿಶಾಲ ಮತ್ತು ಅದ್ಭುತವಾದ ಈ ಪ್ರಕೃತಿ ಯಾರಿಂದ ಮತ್ತು ಹೇಗೆ ಬಂತು? ಹಿಂದೂ ಧರ್ಮದ ಪ್ರಮುಖ ಗ್ರಂಥವಾದ ಭಗವದ್ಗೀತೆಯ ಸಂದೇಶವೇನು?
ಒಬ್ಬ ವಿಚಾರವಂತ ಮನುಷ್ಯನಿಗೆ ಈ ತರಹದ ಪ್ರಶ್ನೆಗಳು ಸ್ವಾಭಾವಿಕ. ಆದರೆ ಎಲ್ಲೆಡೆ ಬರೀ ನಾಸ್ತಿಕತೆ ಮತ್ತು ಕೃತಕ ಜೀವನಶೈಲಿಯನ್ನು ಕಂಡು, ಈ ಬಗ್ಗೆ ಇನ್ನೊಬ್ಬರೊಡನೆ ಮಾತನಾಡಿದರೆ ಎಲ್ಲಿ ಜನರು ನಕ್ಕುಬಿಡುತ್ತಾರೋ ಎಂಬ ಭಯದಿಂದ ಈ ಪ್ರಶ್ನೆಗಳು ಅವನಲ್ಲಿಯೇ ಉಳಿದುಬಿಡುತ್ತವೆ.
ಭಾರತದ ಶ್ರೀಮಂತ ಸಂಕೃತಿಯ ಕೊಡುಗೆಯಾದ ಶ್ರೀಮದ್ ಭಗವದ್ಗೀತೆ, ಶ್ರೀಮದ್ ಭಾಗವತ ಪುರಾಣ, ಉಪನಿಷತ್ತುಗಳು ಇತ್ಯಾದಿ ವೈದಿಕ ಗ್ರಂಥಗಳು ಮೇಲಿನ ಪ್ರಶ್ನೆಗಳಿಗೆ ಸಂಪೂರ್ಣ ಉತ್ತರಗಳನ್ನು ನೀಡುತ್ತವೆ.
ಇಂದಿನ ತಾಂತ್ರಿಕ ಯುಗದಲ್ಲಿ, ಜನರು ತಮ್ಮ ವ್ಯಸ್ತ ಜೀವನದಲ್ಲಿ ಇಂತಹ ಪ್ರಶ್ನೆಗಳನ್ನು ಕೇಳುವುದನ್ನೇ ಮರೆತಿದ್ದಾರೆ. ನಾಸ್ತಿಕತೆ, ಮೋಸ, ಕಪಟ, ಭ್ರಷ್ಟಾಚಾರ ಇತ್ಯಾದಿ ಎಲ್ಲೆಡೆ ತಾಂಡವವಾಡುತ್ತಿವೆ. ಹಲವು ವರ್ಷಗಳ ಹಿಂದಿದ್ದ ವೈಯಕ್ತಿಕ ಮತ್ತು ಸಾಮಾಜಿಕ ಶಾಂತಿ, ನೆಮ್ಮದಿ, ಸೌಹಾರ್ದತೆ ಇಂದಿಲ್ಲ.
ಇಂದಿನ ಕೃತಕ ಜೀವನದ ಕೆಲವು ವಿಪರ್ಯಾಸ ಸತ್ಯಗಳು…
ರಸ್ತೆಗಳು ಅಗಲವಾಗುತ್ತಿವೆ, ಮನಸ್ಸುಗಳು ಚಿಕ್ಕವಾಗುತ್ತಿವೆ.
ಕಟ್ಟಡಗಳು ಮೇಲೇರುತ್ತಿವೆ, ಮೌಲ್ಯಗಳು ಕುಸಿಯುತ್ತಿವೆ.
ದೂರ ಕಡಿಮೆಯಾಗುತ್ತಿದೆ, “ಅಂತರ” ಹೆಚ್ಚಾಗುತ್ತಿದೆ.
ಮನೆಗಳು ದೊಡ್ದದಾಗುತ್ತಿವೆ, ಕುಟುಂಬಗಳು ಚಿಕ್ಕದಾಗುತ್ತಿವೆ.
ಜೀವನಕ್ಕೆ ವರ್ಷಗಳು ತುಂಬುತ್ತಿವೆ, ಆದರೆ ವರ್ಷಗಳಿಗೆ ಜೀವ ತುಂಬುತ್ತಿಲ್ಲ.
ಊರೆಲ್ಲಾ ದೀಪಗಳಿಂದ ಜಗಮಗಿಸುತ್ತಿದೆ, ಆದರೆ ಅಂತರಾಳದಲ್ಲಿ ಕತ್ತಲೆಯಾಗಿದೆ.
ಈ ಎಲ್ಲ ಸಮಸ್ಯಗಳ ಮೂಲ ಆಧ್ಯಾತ್ಮಿಕ ಮನೋವೃತ್ತಿ ಮತ್ತು ಆಚರಣೆಗಳ ಕೊರತೆ.
ಆಧ್ಯಾತ್ಮಿಕ ಹಸಿವಿನಿಂದ ಬಳಲುತ್ತಿರುವ ಇಂದಿನ ಸಮಾಜಕ್ಕೆ ಮನುಷ್ಯ ಜೀವನದ ನಿಜವಾದ ಗುರಿಯತ್ತ ಸನ್ಮಾರ್ಗ ತೋರಲು ಶ್ರೀಲ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಸ್ಥೆ (ಇಸ್ಕಾನ್) ಯನ್ನು ಪ್ರಾರಂಭಿಸಿದರು. ದೇಶ, ಜಾತಿ, ಮತ, ಧರ್ಮ ಇತ್ಯಾದಿಗಳ ಪಕ್ಷಪಾತ ಮಾಡದೆ ಅವರು ಎಲ್ಲರನ್ನು ಭಗವದ್ಭಕ್ತಿಯಲ್ಲಿ ತೊಡಗಲು ಪ್ರೇರೇಪಿಸಿದರು. ಜಗತ್ತಿನ ಮೂಲೆಮೂಲೆಗೆ ಸಂಚರಿಸಿ ಸನಾತನ ಧರ್ಮದ ತತ್ತ್ವಗಳನ್ನು ಬೋಧಿಸಿದರು.ನಮ್ಮೆಲ್ಲರ ಮಾರ್ಗದರ್ಶನಕ್ಕೆಂದು 80 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದರು. ಇಡೀ ವಿಶ್ವದ ಜನರು ಇರಬಹುದಾದ ಒಂದು ಮನೆ (ಇಸ್ಕಾನ್) ಯನ್ನು ಕಟ್ಟಿದರು.
ಶ್ರೀಲ ಪ್ರಭುಪಾದರು ಆದೇಶಿಸಿದಂತೆ ಇಸ್ಕಾನ್ ಭಕ್ತರು ಈಗಲೂ ವಿಶ್ವದಾದ್ಯಂತ ಶ್ರೀಮದ್ ಭಗವದ್ಗೀತೆ ಮತ್ತು ಇತರ ವೈದಿಕ ಗ್ರಂಥಗಳ ದಿವ್ಯಜ್ಞಾನವನ್ನು ಪ್ರಚಾರ ಮಾಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಇಸ್ಕಾನ್, ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಒಂದು ಶಾಖೆಯನ್ನು ಸ್ಥಾಪಿಸಿದೆ. ಬೆಂಗಳೂರಿನ ಜನರಿಗಾಗಿ ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಇಸ್ಕಾನ್ ಶೇಷಾದ್ರಿಪುರಂ ಶಾಖೆಯು ಪ್ರತಿ ಭಾನುವಾರ “ಔತಣಕೂಟ” ವನ್ನು ಆಯೋಜಿಸುತ್ತದೆ. ಹರಿನಾಮ ಸಂಕೀರ್ತನೆ, ಪ್ರವಚನ, ಪ್ರಶ್ನೋತ್ತರಗಳು ಮತ್ತು ಭೋಜನ ಪ್ರಸಾದವನ್ನೊಳಗೊಂಡ ಈ ವಿಶೇಷ ಕಾರ್ಯಕ್ರಮಕ್ಕೆ ಎಲ್ಲರಿಗೂ ಸುಸ್ವಾಗತ.
ಸಮಯ: ಪ್ರತಿ ಭಾನುವಾರ ಬೆಳಿಗ್ಗೆ 7.15 ರಿಂದ 10.00 ರವರೆಗೆ ಮತ್ತು
ಸಂಜೆ 5.30 ರಿಂದ 7.30 ರವರೆಗೆ.
ವಿಳಾಸ:
ಇಸ್ಕಾನ್ ಶ್ರೀ ಜಗನ್ನಾಥ ಮಂದಿರ
ನಂ.5, ಶ್ರೀಪುರಂ,
1ನೇ ಅಡ್ಡರಸ್ತೆ, ಶೇಷಾದ್ರಿಪುರಂ,
ಬೆಂಗಳೂರು – 560020.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 080-23565708